Mathew - Chapter 22
Holy Bible

1 : ಯೇಸುಸ್ವಾಮಿ ಮತ್ತೆ ಅವರೊಡನೆ ಸಾಮತಿಗಳಲ್ಲೇ ಮಾತನಾಡಿದರು: “ಸ್ವರ್ಗಸಾಮ್ರಾಜ್ಯ ಇಂತಿದೆ;
2 : ರಾಜನೊಬ್ಬ ತನ್ನ ಕುಮಾರನ ವಿವಾಹ ಮಹೋತ್ಸವವನ್ನು ಏರ್ಪಡಿಸಿದ.
3 : ಅದಕ್ಕೆ ಆಹ್ವಾನಿತರಾಗಿದ್ದವರನ್ನು ಕರೆಯಲು ಸೇವಕರನ್ನು ಕಳುಹಿಸಿದ. ಆದರೆ ಅವರು ಬರಲು ಒಪ್ಪಲಿಲ್ಲ.
4 : ಪುನಃ ಬೇರೆ ಸೇವಕರನ್ನು ಅಟ್ಟಿದ. ‘ಔತಣ ಸಿದ್ಧವಾಗಿದೆ. ಕೊಬ್ಬಿನ ಮಾಂಸದ ಅಡಿಗೆಯನ್ನು ಮಾಡಿಸಿದ್ದೇನೆ. ಎಲ್ಲವೂ ಅಣಿಯಾಗಿದೆ. ಉತ್ಸವಕ್ಕೆ ಬೇಗ ಬನ್ನಿ’ ಎಂದು ಆಹ್ವಾನಿತರಿಗೆ ತಿಳಿಸುವಂತೆ ಹೇಳಿ ಕಳುಹಿಸಿದ.
5 : ಆದರೂ ಆಹ್ವಾನಿತರು ಅಲಕ್ಷ್ಯ ಮಾಡಿದರು. ಒಬ್ಬ ತೋಟಕ್ಕೆ ಹೊರಟುಬಿಟ್ಟ, ಇನ್ನೊಬ್ಬ ವ್ಯಾಪಾರಕ್ಕೆ ಹೊರಟು ಹೋದ.
6 : ಉಳಿದವರು, ಕರೆಯಲು ಬಂದ ಆಳುಗಳನ್ನೇ ನಿಂದಿಸಿ, ಬಡಿದು, ಕೊಂದು ಹಾಕಿದರು.
7 : ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟುಹಾಕಿಸಿದ.
8 : ಅನಂತರ ತನ್ನ ಸೇವಕರಿಗೆ, ‘ವಿವಾಹ ಮಹೋತ್ಸವವೇನೋ ಸಿದ್ಧವಾಗಿದೆ; ಆಹ್ವಾನಿತರೋ ಅಯೋಗ್ಯರು.
9 : ನೀವು ಹೆದ್ದಾರಿಗಳಿಗೆ ಹೋಗಿ ಕಂಡ ಕಂಡವರನ್ನೆಲ್ಲಾ ಉತ್ಸವಕ್ಕೆ ಕರೆಯಿರಿ’ ಎಂದ.
10 : ಅಂತೆಯೇ ಅವರು ಹೋಗಿ ಯೋಗ್ಯರು, ಅಯೋಗ್ಯರೆನ್ನದೆ ಕಂಡವರನ್ನೆಲ್ಲಾ ಒಟ್ಟುಗೂಡಿಸಿ ಕರೆದುತಂದರು. ವಿವಾಹ ಮಂಟಪ ಅತಿಥಿಗಳಿಂದ ತುಂಬಿಹೋಯಿತು.
11 : “ಆಮೇಲೆ ರಾಜನು ಅತಿಥಿಗಳನ್ನು ನೋಡಲು ಬಂದ. ಅಲ್ಲಿ ವಿವಾಹಕ್ಕೆ ತಕ್ಕ ವಸ್ತ್ರವನ್ನು ಧರಿಸದೆ ಬಂದಿದ್ದ ಒಬ್ಬನನ್ನು ಕಂಡ.
12 : ‘ಏನಯ್ಯ, ಸಮಾರಂಭಕ್ಕೆ ತಕ್ಕ ಉಡುಪಿಲ್ಲದೆ ಒಳಗೆ ಹೇಗೆ ಬಂದೆ?’ ಎಂದು ಅವನನ್ನು ಕೇಳಿದ. ಅದಕ್ಕೆ ಅವನು ಮೌನತಳೆದ.
13 : ಆಗ ರಾಜನು ಪರಿಚಾರಕರಿಗೆ, ‘ಇವನ ಕೈಕಾಲುಗಳನ್ನು ಕಟ್ಟಿ ಹೊರಗಿನ ಕತ್ತಲೆಗೆ ದಬ್ಬಿರಿ; ಅಲ್ಲಿರುವವರೊಡನೆ ಹಲ್ಲುಕಡಿದು ಗೋಳಾಡಲಿ,’ ಎಂದು ಹೇಳಿದ.
14 : “ಹೀಗೆ, ಆಹ್ವಾನಿತರು ಅನೇಕರಾದರೂ ಆರಿಸಲಾದವರು ಕೆಲವರು ಮಾತ್ರ,” ಎಂದರು ಸ್ವಾಮಿ. ರಾಜ್ಯಭಕ್ತಿ ದೈವಭಕ್ತಿಗೆ ವಿರುದ್ದವಲ್ಲ (ಮಾರ್ಕ 12.13-17; ಲೂಕ 20.20-26)
15 : ಅನಂತರ ಫರಿಸಾಯರು ಒಟ್ಟುಗೂಡಿ ಯೇಸುವನ್ನು ಹೇಗೆ ಮಾತಿನಲ್ಲಿ ಸಿಲುಕಿಸುವುದೆಂದು ಸಮಾಲೋಚನೆ ಮಾಡಿಕೊಂಡರು.
16 : ತಮ್ಮ ಶಿಷ್ಯರನ್ನು ಹೆರೋದನ ಪಕ್ಷದ ಕೆಲವರ ಸಮೇತ ಸ್ವಾಮಿಯ ಬಳಿಗೆ ಕಳುಹಿಸಿದರು. ಇವರು ಬಂದು, “ಬೋಧಕರೇ, ತಾವು ಸತ್ಯವಂತರು, ಸತ್ಯಕ್ಕನುಸಾರ ದೈವಮಾರ್ಗವನ್ನು ಬೋಧಿಸುವವರು, ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು; ಎಂದೇ, ಸ್ಥಾನಮಾನಗಳಿಗೆ ಮಣಿಯದವರು. ಇದೆಲ್ಲಾ ನಮಗೆ ಚೆನ್ನಾಗಿ ಗೊತ್ತಿದೆ.
17 : ಹೀಗಿರುವಲ್ಲಿ ರೋಮ್ ಚಕ್ರಾಧಿಪತಿಗೆ ತೆರಿಗೆಕೊಡುವುದು ಧರ್ಮಸಮ್ಮತವೋ ಅಲ್ಲವೋ, ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸುವಿರಾ?” ಎಂದು ಕೇಳಿದರು.
18 : ಯೇಸು ಅವರ ಕುತಂತ್ರವನ್ನು ಅರಿತುಕೊಂಡು, “ಕಪಟಿಗಳೇ, ನನ್ನನ್ನೇಕೆ ಪರೀಕ್ಷಿಸುತ್ತೀರಿ?
19 : ತೆರಿಗೆಗೆಂದು ಕೊಡಬೇಕಾದ ನಾಣ್ಯವನ್ನು ತೋರಿಸಿ,” ಎಂದರು. ಅವರೊಂದು ನಾಣ್ಯವನ್ನು ತಂದುಕೊಟ್ಟರು.
20 : ಆಗ ಯೇಸು, “ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಕೇಳಿದರು.
21 : ಅದಕ್ಕೆ ಅವರು, “ರೋಮ್ ಚಕ್ರವರ್ತಿಯವು,” ಎಂದರು. “ಹಾಗಾದರೆ, ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದು ಯೇಸು ಉತ್ತರಕೊಟ್ಟರು.
22 : ಈ ಮಾತುಗಳನ್ನು ಕೇಳಿ ಅವರೆಲ್ಲರು ಬೆರಗಾದರು; ಯೇಸುವನ್ನು ಬಿಟ್ಟು ಅಲ್ಲಿಂದ ಹೊರಟೇ ಹೋದರು.
23 : ಅದೇ ದಿನ ‘ಸದ್ದುಕಾಯರು’ ಯೇಸುಸ್ವಾಮಿಯ ಬಳಿಗೆ ಬಂದರು. ಸತ್ತಮೇಲೆ ಪುನರುತ್ಥಾನ ಇಲ್ಲ ಎಂಬುದು ಅವರ ಅಭಿಮತ.
24 : ಅವರು ಸ್ವಾಮಿಯನ್ನು ಹೀಗೆಂದು ಪ್ರಶ್ನಿಸಿದರು: “ಬೋಧಕರೇ, ಮಕ್ಕಳಿಲ್ಲದೆ ಒಬ್ಬನು ಸತ್ತುಹೋದರೆ ಅವನ ಹೆಂಡತಿಯನ್ನು ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,” ಎಂದು ಮೋಶೆ ಹೇಳಿದ್ದಾನಷ್ಟೆ.
25 : ಒಮ್ಮೆ ನಮ್ಮಲ್ಲಿ ಏಳು ಮಂದಿ ಅಣ್ಣತಮ್ಮಂದಿರು ಇದ್ದರು. ಅವರಲ್ಲಿ ಮೊದಲನೆಯವನು ಮದುವೆಯಾದ, ಸಂತಾನವಿಲ್ಲದೆ ಸತ್ತುಹೋದ. ಈ ಕಾರಣ ತನ್ನ ಹೆಂಡತಿಯನ್ನು ತಮ್ಮನಿಗೆ ಬಿಟ್ಟುಹೋದ.
26 : ಅದರಂತೆಯೇ ಎರಡನೆಯವ, ಮೂರನೆಯವ, ಹೀಗೆ ಏಳನೆಯವನವರೆಗೂ ಸಂಭವಿಸಿತು.
27 : ಅವರೆಲ್ಲರೂ ತೀರಿಹೋದ ಮೇಲೆ ಆ ಹೆಂಗಸೂ ಸತ್ತುಹೋದಳು.
28 : ಹೀಗಿರುವಲ್ಲಿ, ಪುನರುತ್ಥಾನದ ದಿನ ಆಕೆ ಆ ಏಳು ಮಂದಿ ಅಣ್ಣತಮ್ಮಂದಿರಲ್ಲಿ ಯಾರಿಗೆ ಮಡದಿಯಾಗುವಳು? ಅವರೆಲ್ಲರೂ ಆಕೆಯನ್ನು ಮದುವೆಯಾಗಿದ್ದರಲ್ಲವೇ?” ಎಂದರು.
29 : ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನಿಮ್ಮ ಅಭಿಪ್ರಾಯ ತಪ್ಪು, ಪವಿತ್ರ ಗ್ರಂಥವನ್ನಾಗಲಿ, ದೇವರ ಶಕ್ತಿಯನ್ನಾಗಲಿ ನೀವು ಅರ್ಥ ಮಾಡಿಕೊಂಡಿಲ್ಲ.
30 : ಪುನರುತ್ಥಾನ ಹೊಂದಿದ ಮೇಲೆ ಜನರು ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಸ್ವರ್ಗದ ದೇವದೂತರಂತೆ ಅವರು ಇರುತ್ತಾರೆ.
31 : ಇದಲ್ಲದೆ, ಸತ್ತವರು ಪುನರುತ್ಥಾನ ಹೊಂದುವ ವಿಷಯದಲ್ಲಿ ಹೇಳುವುದಾದರೆ,
32 : ‘ನಾನು ಅಬ್ರಹಾಮನಿಗೆ ದೇವರು, ಇಸಾಕನಿಗೆ ದೇವರು, ಯಕೋಬನಿಗೆ ದೇವರು ಆಗಿದ್ದೇನೆ,’ ಎಂದು ದೇವರೇ ನಿಮಗೆ ಹೇಳಿರುವುದನ್ನು ನೀವು ಓದಿಲ್ಲವೆ? ಹೀಗಿರುವಾಗ ಅವರು ಜೀವಿತರ ದೇವರೇ ಹೊರತು ಮೃತರ ದೇವರಲ್ಲ,” ಎಂದರು.
33 : ಇದನ್ನು ಕೇಳಿದ ಜನರ ಗುಂಪು ಯೇಸುವಿನ ಬೋಧನೆಯನ್ನು ಕುರಿತು ಅತ್ಯಾಶ್ಚರ್ಯಪಟ್ಟಿತು. ಪ್ರಮುಖ ಕಟ್ಟಳೆ (ಮಾರ್ಕ 12.28-34; ಲೂಕ 10.25-28)
34 : ಯೇಸುಸ್ವಾಮಿ ‘ಸದ್ದುಕಾಯ’ರನ್ನು ಸದ್ದೆತ್ತದಂತೆ ಮಾಡಿದರೆಂಬ ಸಮಾಚಾರ ಫರಿಸಾಯರಿಗೆ ಮುಟ್ಟಿತು. ಅವರು ಒಟ್ಟಾಗಿ ಸ್ವಾಮಿಯ ಬಳಿಗೆ ಬಂದರು.
35 : ಅವರಲ್ಲಿ ಒಬ್ಬ ಧರ್ಮೋಪದೇಶಕನು ಯೇಸುವನ್ನು ಪರೀಕ್ಷಿಸುವ ಸಲುವಾಗಿ, ಹೀಗೆಂದು ಪ್ರಶ್ನಿಸಿದನು:
36 : “ಬೋಧಕರೇ, ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ಆಜ್ಞೆ ಯಾವುದು?”
37 : ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು.’
38 : ಇದೇ ಪ್ರಮುಖ ಹಾಗೂ ಪ್ರಥಮ ಆಜ್ಞೆ.
39 : ಇದಕ್ಕೆ ಸರಿಹೊಂದುವ ಎರಡನೇ ಆಜ್ಞೆ ಯಾವುದೆಂದರೆ, ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು.
40 : ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ,” ಎಂದರು.
41 : ಕೂಡಿಬಂದಿದ್ದ ಫರಿಸಾಯರಿಗೆ ಯೇಸು ಈ ಪ್ರಶ್ನೆ ಹಾಕಿದರು:
42 : “ಅಭಿಷಿಕ್ತನಾದ ಲೋಕೋದ್ಧಾರಕನ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಆತ ಯಾರ ಮಗ?” ಅದಕ್ಕವರು, “ದಾವೀದನ ಪುತ್ರ” ಎಂದು ಉತ್ತರಿಸಿದರು.
43 : ಆಗ ಯೇಸು, “ಹಾಗಾದರೆ, ದಾವೀದನೇ ಪವಿತ್ರಾತ್ಮ ಪ್ರೇರಣೆಯಿಂದ ಆತನನ್ನು ‘ಪ್ರಭು’ ಎಂದು ಕರೆದಿದ್ದಾನಲ್ಲಾ, ಅದು ಹೇಗೆ?
44 : “ನಿನ್ನ ಶತ್ರುಗಳನ್ನು ನಾನು ನಿನ್ನ ಪಾದದಡಿ ಹಾಕುವ ತನಕ ನನ್ನ ಬಲಗಡೆ ಆಸೀನನಾಗಿರು ಎಂದು ನನ್ನ ‘ಪ್ರಭು’ವಿಗೆ ಸರ್ವೇಶ್ವರ ಹೇಳಿರುವರು,’ ಎಂದಿದ್ದಾನಲ್ಲವೆ?
45 : “ಇಲ್ಲಿ ದಾವೀದನೇ ಆತನನ್ನು ‘ನನ್ನ ಪ್ರಭು’ ಎಂದು ಕರೆದಿರುವಾಗ ಆತ ದಾವೀದನಿಗೆ ಪುತ್ರನಾಗಿರುವುದು ಹೇಗೆ?” ಎಂದು ಕೇಳಿದರು.
46 : ಇದಕ್ಕೆ ಉತ್ತರವಾಗಿ ಒಂದು ಮಾತು ಹೇಳಲೂ ಫರಿಸಾಯರಿಂದ ಆಗಲಿಲ್ಲ. ಅದು ಮಾತ್ರವಲ್ಲ, ಅಂದಿನಿಂದ ಯೇಸುವನ್ನು ಪ್ರಶ್ನಿಸಲು ಯಾರೂ ಧೈರ್ಯಗೊಳ್ಳಲಿಲ್ಲ.

Holydivine