Genesis - Chapter 12
Holy Bible

1 : ಸರ್ವೇಶ್ವರಸ್ವಾಮಿ ಅಬ್ರಾಮನಿಗೆ ಹೀಗೆಂದರು - “ನೀನು ನಿನ್ನ ಸ್ವಂತ ನಾಡನ್ನೂ ಬಂಧು ಬಳಗದವರನ್ನೂ ತವರು ಮನೆಯನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೊರಟು ಹೋಗು.
2 : ನಾನು ನಿನ್ನನ್ನು ದೊಡ್ಡ ಜನಾಂಗವಾಗಿ ಮಾಡುತ್ತೇನೆ. ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರಿಗೆ ಘನತೆ ಗೌರವವನ್ನು ತರುತ್ತೇನೆ. ನೀನೇ ಆದರ್ಶದ ಆಶೀರ್ವಾದವಾಗಿ ಬೆಳಗುವೆ.
3 : “ನಿನ್ನನ್ನು ಹರಸುವವರನು ನಾ ಹರಸುವೆ. ನಿನ್ನನ್ನು ಶಪಿಸುವವರನು ನಾ ಶಪಿಸುವೆ. ಧರೆಯ ಕುಲದವರಿಗೆಲ್ಲ ನಿನ್ನ ಮುಖೇನ ದೊರಕುವುದು ನನ್ನಿಂದ ಆಶೀರ್ವಾದ.”
4 : ಸರ್ವೇಶ್ವರ ಹೀಗೆಂದು ಹೇಳಿದಮೇಲೆ ಅಬ್ರಾಮನು ಹೊರಟನು. ಲೋಟನು ಅವನ ಸಂಗಡವೆ ಹೋದನು. ಆ ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಅಬ್ರಾಮನಿಗೆ ಎಪ್ಪತ್ತೈದು ವರ್ಷಗಳಾಗಿದ್ದವು.
5 : ತನ್ನ ಹೆಂಡತಿ ಸಾರಯಳನ್ನು, ತನ್ನ ತಮ್ಮನ ಮಗನಾದ ಲೋಟನನ್ನು, ತಾನು ಮತ್ತು ಲೋಟನು ಹಾರಾನಿನಲ್ಲಿ ಗಳಿಸಿದ ಆಸ್ತಿ ಪಾಸ್ತಿಯನ್ನು ಹಾಗು ದಾಸದಾಸಿಯರನ್ನು ತೆಗೆದುಕೊಂಡು ಹೋಗಿ ಕಾನಾನ್ ನಾಡನ್ನು ಸೇರಿದನು.
6 : ಆ ನಾಡಿನಲ್ಲಿ ಸಂಚರಿಸುತ್ತಾ ಅಬ್ರಾಮನು ಶೆಕೆಮ್ ಪುಣ್ಯಕ್ಷೇತ್ರದಲ್ಲಿರುವ ‘ಮೋರೆ’ ಎಂಬ ವೃಕ್ಷದ ಬಳಿಗೆ ಬಂದನು. ಆ ಕಾಲದಲ್ಲಿ ಕಾನಾನ್ಯರು ಆ ನಾಡಿನಲ್ಲಿ ವಾಸವಾಗಿದ್ದರು.
7 : ಅಲ್ಲಿ ಸರ್ವೇಶ್ವರಸ್ವಾಮಿ ಅಬ್ರಾಮನಿಗೆ ದರ್ಶನವಿತ್ತು - “ಈ ನಾಡನ್ನು ನಾನು ನಿನ್ನ ಸಂತಾನಕ್ಕೆ ಕೊಡುತ್ತೇನೆ” ಎಂದು ಹೇಳಿದರು. ತನಗೆ ದರ್ಶನಕೊಟ್ಟ ಸರ್ವೇಶ್ವರನಿಗೆ ಅಬ್ರಾಮನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು.
8 : ಬಳಿಕ ಅವನು ಅಲ್ಲಿಂದ ದಕ್ಷಿಣಕ್ಕೆ ಹೊರಟು ಬೇತೇಲಿಗೆ ಪೂರ್ವಕ್ಕಿರುವ ಗುಡ್ಡಗಾಡಿಗೆ ಬಂದು ಗುಡಾರ ಹಾಕಿ ನೆಲಸಿದನು. ಪಶ್ಚಿಮಕ್ಕೆ ಬೇತೇಲೂ ಪೂರ್ವಕ್ಕೆ ಆಯಿ ಎಂಬ ಊರು ಇದ್ದವು. ಅಲ್ಲೂ ಸರ್ವೇಶ್ವರಸ್ವಾಮಿಗೆ ಒಂದು ಬಲಿಪೀಠವನ್ನು ಕಟ್ಟಿಸಿ ಅವರ ನಾಮಸ್ಮರಣೆ ಮಾಡಿ ಆರಾಧಿಸಿದನು.
9 : ತರುವಾಯ ಅಲ್ಲಿಂದ ಮುಂದೆ ಮುಂದಕ್ಕೆ ಸಾಗುತ್ತಾ ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯಕ್ಕೆ ಬಂದನು.
10 : ಕಾನಾನ್ ನಾಡಿನಲ್ಲಿ ಕ್ಷಾಮ ತಲೆದೋರಿತು. ಅದು ಘೋರವಾಗಿದ್ದುದರಿಂದ ಅಬ್ರಾಮನು ಕೆಲವು ಕಾಲ ಈಜಿಪ್ಟಿನಲ್ಲಿರಲು ಅಲ್ಲಿಗೆ ಇಳಿದು ಹೋದನು.
11 : ಈಜಿಪ್ಟನ್ನು ಪ್ರವೇಶಿಸುವುದಕ್ಕೆ ಮುಂಚೆಯೆ ತನ್ನ ಹೆಂಡತಿ ಸಾರಯಳಿಗೆ, “ನೀನು ಬಲು ಚೆಲುವಾದ ಹೆಣ್ಣು;
12 : ಈಜಿಪ್ಟಿನವರು ನಿನ್ನನ್ನು ನೋಡಿ, ನೀನು ನನ್ನ ಹೆಂಡತಿಯಾಗಿರಬಹುದೆಂದು ಊಹಿಸಿ, ನನ್ನನ್ನು ಕೊಂದು ನಿನ್ನನ್ನು ಜೀವದಿಂದ ಉಳಿಸಾರು.
13 : ಆದಕಾರಣ ನೀನು ನನಗೆ ತಂಗಿಯೆಂದೇ ಅವರಿಗೆ ಹೇಳು. ಆಗ ನಿನ್ನ ನಿಮಿತ್ತ ನನಗೆ ಸತ್ಕಾರ ದೊರಕುವುದು; ನಿನ್ನ ದೆಸೆಯಿಂದ ನನ್ನ ಪ್ರಾಣ ಉಳಿಯುವುದು,” ಎಂದು ತಿಳಿಸಿದನು.
14 : ಅಬ್ರಾಮನು ಈಜಿಪ್ಟಿಗೆ ಬಂದಾಗ ಈಜಿಪ್ಟಿನವರು ಅವನ ಸಂಗಡ ಇದ್ದ ಹೆಣ್ಣು ಬಹಳ ಚೆಲುವೆಯೆಂದುಕೊಂಡರು.
15 : ಫರೋಹನ ಪದಾಧಿಕಾರಿಗಳು ಆಕೆಯನ್ನು ನೋಡಿಬಂದು ಆಕೆಯ ಚೆಲುವನ್ನು ಅವನ ಮುಂದೆ ಹೊಗಳಿದರು.
16 : ಅವನು ಆಕೆಯನ್ನು ಅರಮನೆಗೆ ಕರೆಸಿದನು. ಆಕೆಯ ನಿಮಿತ್ತ ಅಬ್ರಾಮನಿಗೆ ಸತ್ಕಾರ ದೊರಕಿತು; ಕುರಿಮೇಕೆಗಳು, ದನ ಕರುಗಳು, ಗಂಡು ಹೆಣ್ಣು ಕತ್ತೆಗಳು, ದಾಸದಾಸಿಯರು ಹಾಗು ಒಂಟೆಗಳು ದೊರೆತವು.
17 : ಆದರೆ ಅಬ್ರಾಮನ ಹೆಂಡತಿಯನ್ನು ಕರೆಸಿಕೊಂಡ ಕಾರಣ ಫರೋಹನಿಗೂ ಮತ್ತು ಅವನ ಮನೆಯವರಿಗೂ ಸರ್ವೇಶ್ವರ ದೊಡ್ಡ ದೊಡ್ಡ ಗಂಡಾಂತರಗಳನ್ನು ಬರಮಾಡಿದರು.
18 : ಆಗ ಫರೋಹನು ಅಬ್ರಾಮನನ್ನು ಕರೆಸಿ, “ನೀನು ಮಾಡಿರುವುದೇನು?
19 : ಆಕೆ ನಿನ್ನ ಹೆಂಡತಿಯೆಂದು ನನಗೇಕೆ ತಿಳಿಸಲಿಲ್ಲ? ತಂಗಿಯೆಂದು ಏಕೆ ಹೇಳಿದೆ? ಹಾಗೆ ಹೇಳಿದ್ದರಿಂದಲೆ ಆಕೆ ನನಗೆ ಹೆಂಡತಿಯಾಗಲೆಂದು ಕರೆಸಿಕೊಂಡೆ. ಇಗೋ ನಿನ್ನ ಹೆಂಡತಿ! ಕರೆದುಕೊಂಡು ಇಲ್ಲಿಂದ ತೆರಳು,” ಎಂದು ಆಜ್ಞಾಪಿಸಿದನು.
20 : ಅವನ ಅಪ್ಪಣೆ ಪಡೆದ ಸೇವಕರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗಿದ್ದ ಎಲ್ಲದರ ಸಮೇತ ಅಲ್ಲಿಂದ ಕಳಿಸಿಬಿಟ್ಟರು.

Holydivine